Saturday, November 14, 2020

ಪುಸ್ತಕ ಪರಿಚಯ: ಜಿ.ಎಸ್.ಶಿವರುದ್ರಪ್ಪ ಸಂಚಯ

"ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ-ಸ್ನೇಹಗಳ

ಗುರುತಿಸದಾದೆನು ನಮ್ಮೊಳಗೆ"

 

"ಹಾಡು ಹಳೆಯದಾದರೇನು

ಭಾವ ನವನವೀನ"

 

ಭಾವಗೀತೆಗಳು ಹೃದಯಕ್ಕೆ ಎಷ್ಟು ಹತ್ತಿರ ಎನಿಸುತ್ತವೆ ಅಲ್ಲವೇ? ಅಷ್ಟೇ ಸುಲಲಿತವಾಗಿ ಓದಿಸಿಕೊಂಡು ಹಾಗೆಯೇ ವೈಚಾರಿಕತೆಯ ಚಾಟಿ ಏಟನ್ನು ಬೀಸುತ್ತವೆ ಶಿವರುದ್ರಪ್ಪನವರ ಕಾವ್ಯ ವಿಮರ್ಶೆಗಳು. "ವಚನಕಾರರ ವಿಚಾರಕ್ರಾಂತಿ" ಎನ್ನುವ ವಿಮರ್ಶೆಯಲ್ಲಿ ಅವರು ಹೀಗೆ ಬರೆಯುತ್ತಾರೆ.

 "ವಚನಕಾರರು ಅಥವಾ ಶಿವಶರಣರು ಮೂಲತ: ನಿಷ್ಠುರ ವಿಮರ್ಶಕರು. ಅವರು ವೇದ, ಶಾಸ್ತ್ರಗಳ ಮಾತಿಗಿಂತ, ತಮ್ಮ ಸುತ್ತಣ ಪರಿಸರದಲ್ಲಿ ಯಾವುದು ಸ್ವಂತ ಅನುಭವಕ್ಕೆ ಬರುತ್ತದೋ, ಸ್ವಾನುಭವವೇ ಎಲ್ಲಕಿಂತ ಮಿಗಿಲಾದುದು ಎಂದು ಕಂಡು ಕೊಂಡರು.

 ವೇದಕ್ಕೆ ಒರೆಯ ಕಟ್ಟುವೆ. ಶಾಸ್ತ್ರಕ್ಕೆ ನಿಗಳನಿಕ್ಕುವೆ - ಎಂದು ಬಸವಣ್ಣ ನವರು ಸವಾಲು ಹಾಕಿದರು.

 ವೇದಶಾಸ್ತ್ರ ಪುರಾಣಾಗಮಗಳೆಂಬ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿರೋ - ಎಂದು ಅಕ್ಕಮಹಾದೇವಿ ಅವುಗಳ ನಿರರ್ಥಕತೆಯನ್ನು ಘೋಷಿಸಿದಳು.

 ಧರ್ಮವೆಂದರೆ ಬದುಕಿಗೆ ಇಳಿಯಲಾರದ ಆದರ್ಶಗಳ, ವಿಚಾರಗಳ, ನಂಬಿಕೆಗಳ ಒಂದು ಕಂತೆ ಎಂದು ವಚನಕಾರರು ಭಾವಿಸಲಿಲ್ಲ. ಧ್ಯಾನ, ಪೂಜೆ, ಪ್ರಾರ್ಥನೆಗಳು ಇರುವುದು ವ್ಯಕ್ತಿಯ ಅಂತರಂಗವನ್ನು ಪರಿಶುದ್ಧಗೊಳಿಸಲು. ಇವು ಬಹಿರಂಗದ ನಡುವಳಿಕೆಗಳಲ್ಲಿ ಪ್ರಕಟವಾಗದಿದ್ದರೆ ಅಂತರಂಗದ ಆಧ್ಯಾತ್ಮಿಕ ಸ್ಥಿತಿಗೆ ಏನೂ ಅರ್ಥವಿಲ್ಲ."

 ಹೀಗೆ ಇತರೆ ಕವಿಗಳಾದ ಪಂಪ, ಹರಿಹರ, ರಾಘವಾಂಕ, ಸರ್ವಜ್ಞ, ಕುವೆಂಪು, ಬೇಂದ್ರೆಯವರ ಕಾವ್ಯ ವಿಮರ್ಶೆಗಳು ಪುಸ್ತಕದಲ್ಲಿವೆ.

 ಜಾನಪದ, ನವೋದಯ, ಹೊಸಗನ್ನಡ ಕಾವ್ಯ, ಸಾಹಿತ್ಯ ಚಳವಳಿಗಳು ಮತ್ತು ಸಾಹಿತ್ಯ ಪರಂಪರೆ ಇವೆಲ್ಲ ವಿಷಯಗಳ ಮೇಲೆ ಲೇಖಕರು ರಚಿಸಿರುವ ಹಲವಾರು ಮೀಮಾಂಸೆಗಳು ಪುಸ್ತಕದಲ್ಲಿವೆ. ಅವು ಓದುಗರಿಗೆ ಜ್ಞಾನಾರ್ಜನೆ ಮತ್ತು ಹೊಸ ಬರಹಗಾರರಿಗೆ ಮಾರ್ಗದರ್ಶನ ನೀಡಬಲ್ಲವು.

 ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಲೇಖಕರು ರಚಿಸಿದ ನಾಲ್ಕು ಕೃತಿಗಳು - "ಟಾಲ್ ಸ್ಟಾಯ್ ಬೆಳೆದ ಮಲೆನಾಡಿನಲ್ಲಿ", "ವಿವೇಕಾನಂದರ ಹೆಜ್ಜೆಯ ಹಿಂದೆ", "ಸರೋವರ ಮಂಡಲಗಳ ಮಧ್ಯೆ" ಮತ್ತು "ಕೇದಾರನಾಥಕ್ಕೆ" ಕೂಡ ಪುಸ್ತಕದ ಭಾಗವಾಗಿವೆ.

 ಲೇಖಕರು ರಚಿಸಿದ "ಶಿವಯೋಗಿ ಸಿದ್ಧರಾಮ" ಕಾದಂಬರಿಯ ಆಯ್ದ ಭಾಗ ಆಕರ್ಷಿತವಾಗಿದೆ ಮತ್ತು  ಲೇಖಕರಿಗಿದ್ದ ಅಧ್ಯಾತ್ಮದ ಒಲವನ್ನು ಸ್ಪಷ್ಟ ಪಡಿಸುತ್ತದೆ. ಲೇಖಕರ ಆತ್ಮಕಥೆಯಾದ "ಚತುರಂಗ" ಆಯ್ದ ಭಾಗ, ಲೇಖಕರ ಶಾಲಾ ದಿನಗಳು, ಅವರು ಬಾಲಕರಾಗಿದ್ದಾಗ ರಚಿಸಿದ ಕವಿತೆಗಳು, ಅವರ ಸಾಹಿತ್ಯಾಸಕ್ತಿ ರೂಪುಗೊಂಡ ಬಗೆ ಇವುಗಳ ಪರಿಚಯ ಮಾಡಿಸುತ್ತದೆ.

 ಸುಮಾರು ೪೫೦ ಪುಟಗಳ, ಅತ್ಯುತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಿಸಲ್ಪಟ್ಟ ಪುಸ್ತಕ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿಸಲ್ಪಿಟ್ಟಿದು, ರಿಯಾಯಿತಿ ದರದಲ್ಲಿ ಲಭ್ಯವಿದೆ.

  ಪುಸ್ತಕ ಒಂದೇ ಸಲಕ್ಕೆ ಓದಿ ಮುಗಿಸುವ ಕಾದಂಬರಿಯಲ್ಲ. ಬದಲಿಗೆ ನಿಧಾನವಾಗಿ ಮತ್ತು ನಿರಂತರವಾಗಿ ಓದಿದರೆ ಹೃದಯಕ್ಕೆ ತಂಪನ್ನು ತಂದುಕೊಡಬಲ್ಲ ಪುಸ್ತಕ. ಕವಿಗಳ ಮತ್ತು ವಚನಕಾರರ ಮನದಾಳಕ್ಕೆ ಇಳಿಯುತ್ತ, ಸಾಹಿತ್ಯ ಪ್ರೇಮವನ್ನು ಗಟ್ಟಿಗೊಳಿಸಲು ನೆರವಾಗುವ ಪುಸ್ತಕ.




No comments:

Post a Comment