Tuesday, November 17, 2020

ಪುಸ್ತಕ ಪರಿಚಯ: ಕುವೆಂಪು ಸಂಚಯ

 "ವಸಂತ ವನದಲಿ ಕೂಗುವ ಕೋಗಿಲೆ

ರಾಜನ ಬಿರುದು ಬಯಸುವುದಿಲ್ಲ;

ಹೂವಿನ ಮರದಲಿ ಜೇನುಂಬುಳುಗಳು

ಮೊರೆವುದು ರಾಜನ ಭಯದಿಂದಲ್ಲ"       ("ಕವಿ" ಕವಿತೆಯಿಂದ)

 

"ದೇಶ ಕೋಸಲಮಿಹುದು ಧನ ಧಾನ್ಯ ಜನ ತುಂಬಿ

ಸರಯೂ ನದಿ ಮೇಲೆ. ಮೆರೆದುದು ವಿಷಯ ಮಧ್ಯೆ

ರಾಜಧಾನಿ ಅಯೋಧ್ಯೆ"         ("ಶ್ರೀ ರಾಮಾಯಣ ದರ್ಶನಂ" ನಿಂದ)

 

"ಧನ್ಯನ್ ನೀನ್, ಏಕಲವ್ಯ, ಧನ್ಯನೆ ದಿಟಂ"    ("ಬೆರಳ್ ಗೆ ಕೊರಳ್" ನಾಟಕದಿಂದ)

 

"ದೂರದ ಗಿರಿಗಳ ಏರುವೆ ನೀನು;

ದೂರದ ಪುರಗಳ ನೋಡುವೆ ನೀನು"          (""ಮೋಡಣ್ಣನ ತಮ್ಮ" ಶಿಶು ಸಾಹಿತ್ಯದಿಂದ)

 

"ರಂಗಯ್ಯನು ಕುಳಿತನು. ಸ್ವಲ್ಪ ಹೊತ್ತು ತನ್ನ ಕೋವಿಯನ್ನು ಕೈಯಲ್ಲಿ ಹಿಡಿದುಕೊಂಡು ದಿಕ್ಕು ದಿಕ್ಕುಗಳನ್ನು ನೋಡಿದನು. ಸುತ್ತಲೂ ವೀಣಾವಾದ್ಯ ಧ್ವನಿಗೈಯುತ್ತ ಸೊಳ್ಳೆಗಳು ಹಾರಾಡಿ ಕಡಿಯುತ್ತಿದ್ದವು"          ("ಬಂದನಾ ಹುಲಿರಾಯನು" ಕಥೆಯಿಂದ)

 

"ಹೂವಯ್ಯನ ಮುಖವು ಭಾವೋತ್ಕರ್ಷದಿಂದಲೂ ಹರ್ಷದಿಂದಲೂ ಆಗ ತಾನೇ ಅಭ್ಯಂಜನ ಮಾಡಿದವನ ಮುಖದಂತೆ ಕೆಂಪಾಗಿತ್ತು. ಕಣ್ಣು ಸಲೀಲಾವೃತವಾಗಿ ಮಿರುಗುತ್ತಿದ್ದವು. ಸೀತೆ ನೋಡುತ್ತಿದ್ದ ಹಾಗೆಯೆ ಮೆಲ್ಲೆಲರು ಬೀಸಿದಾಗ ಹೂವಿನಿಂದ ಹನಿಗಳುದುರುವಂತೆ ಅವನ ಕಣ್ಣುಗಳಿಂದ ವಾರಿಬಿಂದುಗಳೂ ಸೂಸತೊಡಗಿದವು"        ("ಕಾನೂರು ಹೆಗ್ಗಡಿತಿ" ಕಾದಂಬರಿಯಿಂದ)

 

"ಇಂಗ್ಲಿಷ್ ಸಾಹಿತ್ಯವನ್ನು ಅಮೂಲಾಗ್ರವಾಗಿ ಓದಿದವರು ಬೆಕ್ಕಸಬಡುವಂತಹ ಸಾಹಿತ್ಯ ಶೃಂಗಗಳು ಕನ್ನಡದಲ್ಲಿ ಕೆಲವಾದರೂ ಮೂಡಿವೆ"     ("ನಮಗೆ ಬೇಕಾಗಿರುವ ಇಂಗ್ಲಿಷ್" ಲೇಖನದಿಂದ)

 

"ನನಗೆ ಗುಡ್ಡ ಕಾಡುಗಳಲ್ಲಿ ಗದ್ದೆ ತೋಟಗಳಲ್ಲಿ ಹೊಳೆತೊರೆಗಳೆಡೆ ಅಲೆಯುವುದಂದರೆ ಚಿಕ್ಕಂದಿನಿಂದಲೂ ಇಷ್ಟ. ಸಹ್ಯಾದ್ರಿಯ ನೈಸರ್ಗಿಕ ರಮಣೀಯತೆಯ ಸುವಿಶಾಲ ಸರೋವರದಲ್ಲಿ ನನ್ನ ಬಾಲ ಚೇತನ ಮರಿ ಮೀನಾಗಿ ಓಲಾಡಿ ತೇಲಾಡುತ್ತಿತ್ತು"     ("ನೆನಪಿನ ದೋಣಿಯಲ್ಲಿ" ಆತ್ಮಚರಿತ್ರೆಯಿಂದ)

 

ಕನ್ನಡದ  ಕಂಪು ಕುವೆಂಪು. ಅವರ ಕಾವ್ಯ, ನಾಟಕ, ಶಿಶು ಸಾಹಿತ್ಯ, ಕಥೆ, ಲೇಖನ, ಕಾದಂಬರಿಗಳ ಆಯ್ದ ಭಾಗಗಳು ಇವೆಲ್ಲವುಗಳನ್ನು "ಕುವೆಂಪು ಸಂಚಯ" ಒಂದೇ ಪುಸ್ತಕದಲ್ಲಿ ಓದುವುದು ಸಾಧ್ಯ. ಸುಮಾರು ಎಂಟು ನೂರು ಪುಟಗಳ ಪುಸ್ತಕವನ್ನು ಸಂಪಾದಿಸಿದ್ದಾರೆ ಕನ್ನಡದ ಮೂವರು ಹಿರಿಯ ಲೇಖಕರು. ಇದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿಸಲ್ಪಿಟ್ಟಿದೆ. (ಪ್ರಾಧಿಕಾರದ ಕಾರ್ಯಾಲಯಗಳಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಪುಸ್ತಕ ದೊರೆಯುತ್ತದೆ. ನಾನು ಬೆಂಗಳೂರಿನ ಮಲ್ಲತ್ತ ಹಳ್ಳಿಯ ಕೇಂದ್ರದಿಂದ ಖರೀದಿಸಿದ್ದು).

 

ಕುವೆಂಪುರವರ ಕೃತಿಗಳನ್ನು ಓದುತ್ತ ಬೆಳೆದ ನಮಗೆ ಅವರ ಸಾಹಿತ್ಯ ಕೃಷಿಯ ಪರಿಚಯ ಇದ್ದೇ ಇದೆ. ಆದರೆ ಅವರ ಕೃತಿಗಳಲ್ಲಿ ಕಾಣುವ ಪೃಕೃತಿ ಸೌಂದರ್ಯ, ಬಾಳಿನ ಮಾಧುರ್ಯ, ಭಾಷಾ ಸಂಪತ್ತು ಮತ್ತೆ ಮತ್ತೆ ಓದುವ ಪ್ರೇರೇಪಣೆ ಮೂಡಿಸದೆ ಇರದು. ಅದರಲ್ಲೂ ಕುವೆಂಪುರವರ ಕನ್ನಡ ಪ್ರೇಮ ಅಪರಿಮಿತವಾದದ್ದು. ಅದಕ್ಕೇನೇ ಅವರು ನಮಗೆ ಹೇಳಿದ್ದು:

 

"ಎಲ್ಲಾದರೂ ಇರು, ಎಂತಾದರು ಇರು;

ಎಂದೆಂದಿಗೂ ನೀ ಕನ್ನಡವಾಗಿರು"




No comments:

Post a Comment