Saturday, April 3, 2021

ಯುದ್ಧಗಳ ಬದಲಾದ ಸ್ವರೂಪವೇ ಚುನಾವಣೆ

ಮನುಷ್ಯ ಚರಿತ್ರೆ ದಾಖಲಿಸುವ ಮುಂಚೆಯೇ ಬುಡಕಟ್ಟು ಜನಾಂಗಗಳು ಗಡಿಗಾಗಿ, ತಮ್ಮ ಶ್ರೇಷ್ಠತೆ ತೋರ್ಪಡಿಸುವುದಕ್ಕಾಗಿ ಕಾದಾಡುತ್ತಿದ್ದರಲ್ಲ. ಅಲ್ಲಿಂದ 1945 ರವರೆಗಿನ ಎರಡನೇ ಜಾಗತಿಕ ಮಹಾ ಯುದ್ಧದವರೆಗೆ ಯುದ್ಧಗಳು ತಮ್ಮ ರಾಜನ ಅಳಿವು ಉಳಿವನ್ನು ನಿರ್ಧರಿಸುತ್ತಿದ್ದವು. ಆದರೆ ಎರಡನೇ ಜಾಗತಿಕ ಯುದ್ಧದಲ್ಲಿ ಹಿಟ್ಲರ್-ಸ್ಟಾಲಿನ್, ಅಮೇರಿಕ-ಜಪಾನ್ ನಡುವಿನ ಹಣ ಹಣಿ ಅಪಾರ ಪ್ರಮಾಣದ ಸಾವು ನೋವು ತಂದ ನಂತರ ಮನುಷ್ಯ ಯುದ್ಧಗಳ ಬದಲಿಗೆ ಚುನಾವಣೆಯನ್ನು ಕಾರ್ಯರೂಪಕ್ಕೆ ತಂದ. ಚುನಾವಣೆಗಳು ಹೊಸ ಜಗತ್ತಿನ ಹರಿಕಾರರಾಗದೆ  ಹಳೆಯ ಯುದ್ಧಗಳ ಹೊಸ ಸ್ವರೂಪವಾಗಿ ಬದಲಾದವು.


ಹಿಂದೆ ಒಬ್ಬ ರಾಜ ಇನ್ನೊಬ್ಬ ರಾಜನ ಮೇಲೆ ಕಾದಾಡಿದರೆ ಇಂದು ಒಂದು ರಾಜಕೀಯ ಪಕ್ಷ ಇನ್ನೊಂದು ಪಕ್ಷದ ಮೇಲೆ ಯುದ್ಧ ಸಾರುತ್ತದೆ. ಅಂದಿಗೆ ರಣ ಕಹಳೆ ಊದಿದರೆ ಇಂದಿಗೆ ಲೌಡ್ ಸ್ಪೀಕರ್ ಗಳ ಹಾವಳಿ. ಅಂದಿಗೆ ದುಡ್ಡು ಕೊಟ್ಟು ಸೈನಿಕರನ್ನು ಮತ್ತು  ಅವರ ನಾಯಕರನ್ನು ಖರೀದಿ ಮಾಡಿದರೆ, ಇಂದಿಗೆ ಮತದಾರರನ್ನು ಮತ್ತು ಎದುರಾಳಿ ನಾಯಕರನ್ನು ಖರೀದಿಸಲಾಗುತ್ತದೆ. ಅಂದಿಗೆ ಮೋಸದಿಂದ ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸಿದರೆ, ಇಂದಿನ ಸಿ.ಡಿ. ಪ್ರಕರಣಗಳು ಇನ್ನೇನು? ಅಂದು ಯುದ್ಧವೆಂದರೆ ಹೊಡೆದಾಟ. ಇಂದಿಗೆ ಅದು ವಾಕ್ಸಮರ. ಆವೇಶ ಹೆಚ್ಚಾದಾಗ ಅದು ಬಡಿದಾಟವಾಗಿ ಬದಲಾಗವುದು ಇಂದಿಗೂ ಇದೆ. ಅಂದಿಗೆ ರಾಜ ತನ್ನ ಅಂಗರಕ್ಷಕರ ಜೊತೆ ಬರುತ್ತಿದ್ದ. ಇಂದಿನ ಪುಢಾರಿಗಳು ತಮ್ಮ ಹುಡುಗರ ಗುಂಪನ್ನು ಕಟ್ಟಿಕೊಂಡು ಬರುತ್ತಾರೆ.


ಅಂದಿನ ರಾಜ, ಮಹಾರಾಜರು ಇಂದಿನ ಮುಖ್ಯ ಮಂತ್ರಿ, ಪ್ರಧಾನ ಮಂತ್ರಿಗಳಾಗಿ ಬದಲಾಗಿದ್ದಾರೆ ರಾಜನನ್ನು ವಿರೋಧಿಸಿದ ಸಾಮಾನ್ಯರಿಗೆ ಅಂದಿಗೂ ಉಳಿಗಾಲ ಇರಲಿಲ್ಲ, ಇಂದಿಗೂ ಇಲ್ಲ. ಪ್ರಜಾಪ್ರಭುತ್ವ ಮತ್ತು ಚುನಾವಣೆಗಳು ಯುದ್ಧಗಳ ರಕ್ತದೋಕುಳಿ ತಪ್ಪಿಸಿದರೂ, ನಿಜ ಬದಲಾವಣೆಯನ್ನು ತರಲೇ ಇಲ್ಲ. ಬುದ್ಧ, ಶಂಕರ, ಬಸವ, ವಿವೇಕಾನಂದರಂತಹ ಸಮಾಜ ಸುಧಾರಕರು ಮನುಷ್ಯನ ಆಸೆಗಳಿಗೆ ಧರ್ಮ-ಕಾಯಕದ ಕಡಿವಾಣ ಹಾಕಿದರೂ, ಅಧಿಕಾರ ದಾಹದ ಮನುಜರು ರಕ್ತ ಬೀಜಾಸುರನ ಸಂತತಿಯಂತೆ ಹಬ್ಬುತ್ತಲಿದ್ದಾರೆ. ಯುದ್ಧ ಗೆದ್ದವರೇ ಅಂದಿಗೆ ರಾಜರು. ಚುನಾವಣೆಗಳನ್ನು ರಣಭೂಮಿಯನ್ನಾಗಿ ಮಾಡಿಕೊಂಡವರೇ ಇಂದಿನ ಪ್ರಭುಗಳು. 


ಪ್ರಜೆಗಳು ಅಂದಿಗೆ ರಾಜ ಮನೆತನಗಳನ್ನು ಕಂದಾಯ ಕೊಟ್ಟು ಸಲಹಿದರೆ, ಇಂದಿಗೆ ರಾಜಕೀಯ ಪಕ್ಷಗಳನ್ನು ಸಲಹುತ್ತಾರೆ. ಕಾಲ ಬದಲಾಗಿ, ಬದುಕಿನ ಹೊರ ನೋಟ ಬದಲಾದರೂ, ಎಂದೆಂದಿಗೂ ಬದಲಾಗದ ಮನುಜನ ಆಂತರಿಕ ಸ್ವಭಾವದ ಅತಿರೇಕಗಳು ಅಂದಿಗೆ ಯುದ್ಧಗಳಾಗಿ ಬದಲಾದರೆ, ಇಂದಿಗೆ ಅವು ಚುನಾವಣೆಗಳಾಗಿ ಬದಲಾಗಿವೆ.

No comments:

Post a Comment