Saturday, April 10, 2021

ಶರಣರು ಕಟ್ಟಿದ ಕರುಣಾ ಕೇಂದ್ರ

ಮನೆ ಇಲ್ಲದವರಿಗೂ, ಮನೆ ಸಾಕಾದವರಿಗೂ ಆಶ್ರಯ ನೀಡುವ ಸ್ಥಳ ಮಠ. ಚಿತ್ರದುರ್ಗದ ಮುರುಘರಾಜೇಂದ್ರ ಮಠ ಕೇವಲ ಮನುಶ್ಯರಿಗಲ್ಲದೆ ಹಲವಾರು ಪ್ರಾಣಿ ಪಕ್ಷಿಗಳ ವಾಸ ಸ್ಥಾನ ಕೂಡ ಆಗಿದೆ. ಕನ್ನಡ ಮಣ್ಣಿನಲ್ಲಿ ರಾಜ ಮಹಾರಾಜರು ಸಾಧಿಸಿದ್ದಕ್ಕಿಂತ ಹೆಚ್ಚಿನ ಸಾಧನೆ ಇಲ್ಲಿನ ಸಾಧು, ಸಂತ, ಶರಣರದ್ದು. ನಾಯಕರು ಕಟ್ಟಿದ ಕಲ್ಲಿನ ಕೋಟೆ ಇಂದಿಗೆ ಬಿಸಿಲಿನಲ್ಲಿ ಭಣಗುಡುತ್ತಿದ್ದರೆ, ಶರಣರು ಕಟ್ಟಿದ ಮಠ, ವನ ಮಾತ್ರ ಹಚ್ಚ ಹಸಿರು. ಕೋಟೆ ಅಂದಿನ ಕತ್ತಿಯ ಮೊನಚು, ಫಿರಂಗಿ ಗುಂಡುಗಳು ಹರಿಸಿದ ರಕ್ತ ಮತ್ತು ಮನುಷ್ಯನ ಕ್ರೌರ್ಯದ ನೆನಪು ತಂದರೆ, ಮಠ ಮನುಷ್ಯನ ಇನ್ನೊಂದು ಮುಖವಾದ ಕರುಣೆ ಎನ್ನುವ ತಣ್ಣನೆಯ ತೀರ್ಥ ಪ್ರವಹಿಸುವ ಕೇಂದ್ರವಾಗಿ ಇತಿಹಾಸವನ್ನು ಇಂದಿನ ಕಾಲದ ಜೊತೆಗೆ ಜೋಡಿಸುತ್ತದೆ.

ದುಷ್ಟತೆ ಮೈಗೂಡಿಸಿಕೊಂಡಂತ ಸಮಾಜದ ವಿಷ ತಗ್ಗಿಸಲು, ಮಾನವೀಯತೆಂಬ ಜೀವ ಸೆಲೆ ಬತ್ತದಂತೆ ಕಾಪಾಡಲು ಮಠಗಳನ್ನು ಕಟ್ಟಬೇಕಾದ ಅವಶ್ಯಕತೆಯನ್ನು ಮನಗಂಡ ಶರಣರು ತಾವು ವಿರಕ್ತರಾದರೂ, ಸಮಾಜೋದ್ಧಾರಕ್ಕಾಗಿ ಹಟದಿಂದ ಮಠ ಕಟ್ಟಿದರು. ೧೭ನೆ ಶತಮಾನದಲ್ಲಿ ಈ ಮಠ ಕಟ್ಟಿದ ಶ್ರೀ ಗುರುಸಿದ್ಧ ಸ್ವಾಮಿಗಳಿಂದ, ಅದನ್ನು ಅನವರತ ನಡೆಸಿಕೊಂಡ ಬಂದ ಅನೇಕ ಶರಣರು, ಇಂದು ಅದನ್ನು ಮುನ್ನಡೆಸುವ ಶ್ರೀ ಶಿವಮೂರ್ತಿ ಶರಣರವರೆಗೆ ಹಲವಾರು ಸಂತರ ಜೀವಶಕ್ತಿಯನ್ನು ಈ ಮಠ ತನ್ನದಾಗಿಸಿಕೊಂಡಿದೆ. ೧೫೦ ಕ್ಕೂ ಹೆಚ್ಚು ವಿದ್ಯಾ ಕೇಂದ್ರಗಳನ್ನು ಈ ಮಠ ನಡೆಸುತ್ತ, ಬರಿ ರಾಜಕೀಯ ಅಥವಾ ಧಾರ್ಮಿಕ ಕೇಂದ್ರವಾಗದೆ, ಮನುಷ್ಯನ ಅಜ್ಞಾನವನ್ನು ಹೋಗಲಾಡಿಸುವ ಪ್ರಯತ್ನವನ್ನು ಯಾವತ್ತಿಗೂ ಜಾರಿಯಲ್ಲಿಟ್ಟಿದೆ.

ದೂರದ ಹರಿದ್ವಾರ, ಕಾಶಿಗೆ ಪ್ರವಾಸ ಹೋಗಿ, ಅಲ್ಲಿ ಗಂಗೆಯಲ್ಲಿ ಮುಳುಗೆದ್ದು ಪಾಪ ಪರಿಹಾರ ಎನ್ನುವ ಭ್ರಮೆಯಲ್ಲಿ ವಾಪಸ್ಸು ಬರುವುದಕ್ಕಿಂತ, ನಮ್ಮ ಸುತ್ತ ಮುತ್ತಲಿನ ಮಠಗಳ ಅಂಗಳದ ಕಸ ಬಳೆದು, ನೀರು ಹೊತ್ತು ಹಾಕಿ, ಬಂದವರಿಗೆ ಊಟ ಬಡಿಸಿ, ಶರಣರ ಸಾನ್ನಿಧ್ಯದಲ್ಲಿ ಪ್ರಾರ್ಥಿಸಿದರೆ ಎಂಥಹ ಕಷ್ಟಕರ ಜೀವನವಾದರೂ ಸಹನೀಯವಾದೀತು ಎನ್ನುವುದು ನನ್ನ ಅಭಿಪ್ರಾಯ.





No comments:

Post a Comment