Sunday, April 11, 2021

ಕೇಳಬಾರದ ಪ್ರಶ್ನೆಗಳು ಆದರೂ ಸಿಗುವ ಉತ್ತರಗಳು

ಯಾರಾದರೂ ಆಗಲಿ ಏಕೆ ಸುಳ್ಳು ಹೇಳುತ್ತಾರೆ? ಚಿಕ್ಕ ಮಕ್ಕಳು ಚಾಕಲೇಟ್ ಆಸೆಗೋ, ಇಲ್ಲವೇ ಆಟದ ಸಾಮಾನು ತಾನು ಮುರಿದಿಲ್ಲವೆಂದೋ ಸುಳ್ಳು ಹೇಳಬಹುದು. ರಾಜಕಾರಣಿಗಳು ಪರಿಸ್ಥಿತಿಯ ಲಾಭ ಪಡೆಯಲೋ, ಇಲ್ಲವೇ ಕುಣಿಕೆಯಿಂದ ಪಾರಾಗಲೋ ಸುಳ್ಳು ಹೇಳಬಹುದು. ಇದು ಲಾಭ-ನಷ್ಟದ ಲೆಕ್ಕಾಚಾರವಾಯಿತು. ಆದರೆ ಕೆಲವರು ಸುಳ್ಳನ್ನೇ ಜೀವನ ಮಾಡಿಕೊಂಡಿರುತ್ತಾರಲ್ಲ. ಅವರ ಬಗ್ಗೆ ವಿಚಾರ ಮಾಡಿ ನೋಡೋಣ.


ಕಳ್ಳ ತಾನು ಸಮಾಜದಲ್ಲಿ ಕಳ್ಳ ಎಂದು ಒಪ್ಪಿಕೊಂಡರೆ ಅವನ ಆಟ ನಿಲ್ಲುತ್ತದೆ. ಅದಕ್ಕೆ ಆತ ಬೇರೆಯದೇ ಮುಖವಾಡ ಧರಿಸುತ್ತಾನೆ. ಒಬ್ಬ ಭ್ರಷ್ಟ ಅಧಿಕಾರಿ ತನ್ನ ದೌರ್ಬಲ್ಯ ಮುಚ್ಚಿಕೊಳ್ಳಲು ಅಗತ್ಯಕ್ಕಿಂತ ಹೆಚ್ಚಿಗೆ ಖಡಕ್ಕಾಗಿ ಇರುತ್ತಾನೆ. ಕುಡಿತಕ್ಕೆ ದಾಸನಾದ ಗಂಡಸು ಜೋರು ಧ್ವನಿಯಲ್ಲೇ ಸುಳ್ಳೇ ಜಗಳ ತೆಗೆಯುತ್ತಾನೆ. ಅನೈತಿಕ ಸಂಬಂಧ ಹೊಂದಿದ ಹೆಣ್ಣು ಹೂವಿನಷ್ಟೇ ಮೆತ್ತಗೆ ಸುಳ್ಳು ಹೇಳಿ, ಕೇಳುಗರ ಕಿವಿಯಲ್ಲಿ ಹೂವು ಇಟ್ಟು ಕಳಿಸುತ್ತಾಳೆ. ಮೈತುಂಬ ಸಾಲ ಮಾಡಿಕೊಂಡ ವಿಫಲ ವರ್ತಕ, ಚಟಗಳಿಗೆ ದಾಸರಾಗಿರುವ ಮಕ್ಕಳ ಹೆತ್ತ ತಾಯಿ ತಮಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ದಾರಿಯೇ ಇಲ್ಲ ಎಂಬಂತೆ ವರ್ತಿಸುತ್ತಾರೆ.


ಅವರಿಗೆ ನೀವು ಯಾಕೆ ಹೀಗಾಯಿತು ಎಂದು ಪ್ರಶ್ನೆ ಕೇಳಿದರೆ ಉಪಯೋಗವಿಲ್ಲ. ಯಾವ ದೇವರ ಮೇಲೆ ಆಣೆ ಮಾಡಿಸಿದರೂ, ಅವರು ನಿಜ ಹೇಳಲಾರರು. ಅವರು ಈಗಾಗಲೇ ತಮಗೆ ತಾವು ಸುಳ್ಳು ಹೇಳಿಕೊಂಡಿದ್ದಾರೆ. ಅದನ್ನೇ ನಿಮಗೂ ಹೇಳುತ್ತಾರೆ. ಬದಲಿಗೆ ಅವರ ಜೊತೆ ಸ್ವಲ್ಪ ಸಮಯ ಕಳೆದು ನೋಡಿ. ವಾಸ್ತವ ಸತ್ಯದ ಅನಾವರಣ ನಿಮಗೆ ಆಗುತ್ತಾ ಹೋಗುತ್ತದೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕೇ ಹೋಗುತ್ತದೆ.


ತಮ್ಮ ದೌರ್ಬಲ್ಯಗಳನ್ನು ನೇರವಾಗಿ ಎದುರಿಸುವ ಜನ ತುಂಬಾ ಕಡಿಮೆ. ಅವರಿಗೆ ಸುಳ್ಳು ಹೇಳುವ ಅವಶ್ಯಕತೆ ಬರುವುದಿಲ್ಲ. ಆದರೆ ಉಳಿದವರಿಗೆ ಸುಳ್ಳಿನ ಲೋಕವೇ ಪ್ರೀತಿ. ವಾಸ್ತವವನ್ನು ಒಪ್ಪಿಕೊಳ್ಳದೆ, ಕನಸುಗಳನ್ನು ಕೈ ಬಿಡದೆ, ಅಡ್ಡ ದಾರಿ ಹಿಡಿದು, ತಮ್ಮ ದೌರ್ಬಲ್ಯಗಳನ್ನು ಮುಚ್ಚಿ ಹಾಕಲು ಸುಳ್ಳನ್ನು ಅವಲಂಬಿಸುತ್ತಾರೆ. ಆದರೆ ಒಂದು ಸುಳ್ಳು ಮುಚ್ಚಿ ಹಾಕಲು ಇನ್ನೊಂದು ಸುಳ್ಳು ಹೇಳಬೇಕಲ್ಲ. ಹೀಗೆ ಅವರು ಸುಳ್ಳಿನ ಸರಮಾಲೆಯಲ್ಲೇ ಸಿಕ್ಕಿ ಹಾಕಿಕೊಂಡು ತಮ್ಮ ಜೀವನ ಮತ್ತೆ ಬದಲಾಗದಷ್ಟು ನೈತಿಕ ಅಧಪತನಕ್ಕೆ ಇಳಿದು ಬಿಡುತ್ತಾರೆ. ಅದರಿಂದ ಹೊರ ಬರುವ ಹಾದಿ ಕಠಿಣ. ಅದಕ್ಕೆ ಈ ಜಗತ್ತಿಗೆ ಸತ್ಯ ಅಪಥ್ಯ.

No comments:

Post a Comment