Tuesday, December 15, 2020

ವಾಯು ಮಾಲಿನ್ಯ: ಸಹನೀಯವಾಗಿಸುವುದು ಹೇಗೆ?

ಕಳೆದ ದಶಕದಲ್ಲಿ ವಾಯು ಮಾಲಿನ್ಯದ ಬಗ್ಗೆ ವಿಚಾರವೇ ಮಾಡದ ನಾವುಗಳು ಇಂದು ಅದರ ಬಗ್ಗೆ ಚಿಂತಿಸುವ ಕಾಲ ಬಂದಿದೆ. ದೇಶದ್ಯಾಂತ ಸ್ಥಾಪಿಸಲಾಗಿರುವ ನೂರಾರು ಸಂವೇದಕಗಳ (Sensor) ಸಹಾಯದಿಂದ ಇಂದು ನಾವು ನಾವು ಉಸಿರಾಡುವ ಗುಣ ಮಟ್ಟದ ಬಗ್ಗೆ ತಿಳಿದುಕೊಳ್ಳಬಹುದು. ಕೆಲವು ಕಡೆ ಉತ್ತಮ ಎಂದೆನಿಸಿದರೆ, ಇನ್ನು ಕೆಲವು ಕಡೆ ಅಪಾಯಕಾರಿ ಎನ್ನುವ ಮಟ್ಟಕ್ಕೆ ವಾಯು ಮಾಲಿನ್ಯವಿದೆ.

 

ಸರಕಾರವಾಗಲಿ, ಜನತೆಯಾಗಲಿ ಇದರ ಕಡೆಗೆ ಗಮನ ಹರಿಸಿಲ್ಲ ಎಂದೇನಿಲ್ಲ.  BS -IV ವಾಹನಗಳಿಂದ BS -VI ಕಡೆಗೆ ಸಾಗಿದ್ದು ಮಾಲಿನ್ಯದ ಮಟ್ಟ ಕಡಿಮೆ ಮಾಡಲು. ಕಲ್ಲಿದ್ದಲ್ಲಿಂದ ಉತ್ಪಾದಿಸುವ ವಿದ್ಯುತ್ ಗೆ ಒತ್ತು ನೀಡದೆ ಗಾಳಿ ಯಂತ್ರ (Wind Power) ಮತ್ತು ಸೌರ ಫಲಕ (Solar Panel) ಗಳಿಂದ ವಿದ್ಯುತ್ ಉತ್ಪಾದನೆಯೆಡೆಗೆ ಸಾಗುತ್ತಿರುವುದು ಇದೇ ಉದ್ದೇಶ. ಗ್ರಾಮೀಣ ಪ್ರದೇಶಗಳಲ್ಲಿ ಅಡಿಗೆಗೆ ಉರುವಲು ಕಟ್ಟಿಗೆ ಬದಲು, LPG ಉಪಯೋಗಿಸುತ್ತಿರುವುದು ಒಳ್ಳೆಯ ಬೆಳವಣಿಗೆಯೇ. ಇದೆಲ್ಲ ಇದ್ದರೂ, ಕೆಲವು ಕಾರ್ಖಾನೆ ಮತ್ತು ಉದ್ದಿಮೆಗಳು ಅಪಾಯಕಾರಿ ಮಟ್ಟದಲ್ಲಿ ಹೊಗೆ ಉಗುಳುವುದು ನಿಂತಿಲ್ಲ. ಯೂರೋಪ್ ದೇಶಗಳಲ್ಲಿ ಅವುಗಳನ್ನು ಆಕಾಶದಲ್ಲಿರುವ ಉಪಗ್ರಹಗಳ ಮೂಲಕ ಪತ್ತೆ ಹಚ್ಚಿ ದಂಡ ವಿಧಿಸುತ್ತಾರೆ. ನಮ್ಮ ಉಪಗ್ರಹಗಳು ಆ ಕೆಲಸ ಮಾಡಲಾರವು ಎಂದಲ್ಲ. ಆದರೆ ಆ ಕಾರ್ಖಾನೆಗಳು ರಾಜಕೀಯ ಧುರೀಣರದ್ದೋ, ಅವರ ಸಂಬಂಧಿಗಳದ್ದೋ ಆಗಿದ್ದರೆ ಅದು ಉಂಟು ಮಾಡುವ ರಾಜಕೀಯ ತೊಡಕು ವಾಯು ಮಾಲಿನ್ಯವನ್ನು ಮುಂದುವರೆಸುತ್ತವೆ.

 

ಮಾಲಿನ್ಯ ತಗ್ಗಿಸುವ ತಂತ್ರಜ್ಞಾನದ (Abatement Technology ) ಉಪಯೋಗ ಮತ್ತು ಅವುಗಳ ನಿರಂತರ ನವೀಕರಣದಿಂದ ಉದ್ದಿಮೆಗಳಿಂದ ಆಗುವ ಮಾಲಿನ್ಯದ ಪ್ರಮಾಣವನ್ನು ಸಾಕಷ್ಟು ಮಟ್ಟಿಗೆ ತಗ್ಗಿಸಲು ಸಾಧ್ಯ. ಅವುಗಳಿಗೆ ಆಗುವ ಹೆಚ್ಚಿನ ಖರ್ಚು ವೆಚ್ಚಗಳಿಗೆ ಹೋಲಿಸಿದರೆ ಅದರಿಂದ ಆಗುವ ಪರೋಕ್ಷ ಲಾಭವೇ ಹೆಚ್ಚಿನದಾಗಿದೆ. ಮಾಲಿನ್ಯ ಉಂಟು ಮಾಡುವ ಅನಾರೋಗ್ಯ, ವೈದ್ಯಕೀಯದ ಖರ್ಚು ಮತ್ತು ಆಗ ನೌಕರರು ಕೆಲಸ ಮಾಡದೇ ಉಂಟಾಗುವ ಆರ್ಥಿಕ ಪೆಟ್ಟು ಇವುಗಳನ್ನು ಲೆಕ್ಕ ಹಾಕಿದರೆ, ವಾಯು ಮಾಲಿನ್ಯ ಕಡಿಮೆ ಮಾಡುವುದಕ್ಕೆ ಮಾಡುವ ಖರ್ಚು ಹೆಚ್ಚು ಎನ್ನಿಸಲಾರದು.

 

ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ತಾಮ್ರ ತಯಾರಿಕೆ ಘಟಕವೊಂದು ತಾಜ್ಯ ವಸ್ತುಗಳನ್ನು ಸರಿಯಾಗಿ ಪರಿಷ್ಕರಿಸದೆ ಇದ್ದುದರಿಂದ, ಆ ಭಾಗದ ಜನರಲ್ಲಿ ಕ್ಯಾನ್ಸರ್ ರೋಗ ಜಾಸ್ತಿ ಆಗಿ, ಕೊನೆಗೆ ಆ ಕಾರ್ಖಾನೆಯನ್ನು ಮುಚ್ಚಿದ ಉದಾಹರಣೆ ಉಂಟಲ್ಲ. ಹಾಗೆಯೇ ಸಿಮೆಂಟ್ ಕಾರ್ಖಾನೆಗಳು, ಲೋಹದ ಕುಲುಮೆಗಳು ಪರಿಸರವನ್ನು ಹಾಳು ಮಾಡಿದ್ದಲ್ಲದೆ ತಮ್ಮ ನೌಕರರ ಜೀವನಾವಧಿಯನ್ನೇ ಕಡಿಮೆ ಮಾಡಿಲ್ಲವೇ? ಅದಕ್ಕೆ ಅವರನ್ನು ಜವಾಬ್ದಾರರನ್ನಾಗಿ ಮಾಡಿ, ಸೂಕ್ತ ತಿದ್ದುಪಡಿಗಳು ಆಗುವಂತೆ ಮಾಡುವ ಹೊಣೆ ಸರಕಾರದ್ದು ಎಷ್ಟೋ, ಅಷ್ಟೇ ಜವಾಬ್ದಾರಿ ಜನರದ್ದೂ, ತಾವು ಉಪೇಕ್ಷಿಸದೇ, ಎಚ್ಚತ್ತುಕೊಳ್ಳುವ ಕಡೆಗೆ ಆಗಬೇಕಿದೆ.

 

ಪಟ್ಟಣಗಳಲ್ಲಿ ವಾಯು ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ವಾಹನಗಳಿಂದಲೇ. ವಾಹನ ಓಡಾಟ ತಗ್ಗಿಸಿ ಮೆಟ್ರೋ ತರಹದ ಸಮೂಹ ಸಾರಿಗೆ ಉಪಯೋಗಿಸಿದಷ್ಟು ಒಳ್ಳೆಯದು. ಆದರೆ ಅದರ ವ್ಯವಸ್ಥೆ ಇಲ್ಲದ ಕಡೆಗೆ ಹೇಗೆ? ನೀವು ವಾಸಿಸುವ ಜಾಗ ಬದಲಿಸುವುದು ಸೂಕ್ತವೇ? ಯೋಚಿಸಿ ನೋಡಿ.

 

ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ, ಈ ಲಿಂಕ್ ನಗರದ ಹಲವು ವಲಯದ ವಾಯು ಗುಣಮಟ್ಟವನ್ನು ತಿಳಿಸಿಕೊಡುತ್ತದೆ. ಮೈಸೂರು ರಸ್ತೆಯ ಬಾಪೂಜಿನಗರ ಭಾಗದಲ್ಲಿ ವಾಯು ಮಾಲಿನ್ಯ ಅನಾರೋಗ್ಯಕರ ಮಟ್ಟದಲ್ಲಿ ಇದೆ ಎಂದು ಅದು ತೋರಿಸುತ್ತಿದೆ.

https://aqicn.org/city/india/bengaluru/bapuji-nagar

No comments:

Post a Comment